ಕಲಬುರಗಿ: ಇಲ್ಲಿನ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದ ಮತ್ತೊಂದು ಕರ್ಮಕಾಂಡ ಬಯಲಿಗೆ ಬಂದಿದೆ. ಕಾರಾಗೃದದಲ್ಲಿ ಡ್ರಗ್ಸ್ ಸೇವನೆ ಮಾಡಲಾಗುತ್ತಿದೆ ಎನ್ನಲಾದ ವಿಡಿಯೋ, ಸಾಮಾಜಿಕ ಜಾಲತಾಣ ಖಾತೆಗಳನ್ನು ಬಳಕೆ ಮಾಡುತ್ತಿರುವ ಮಾಹಿತಿ ಮತ್ತು ಮುಬೈಲ್ ಜಾಮಾರ್ ಧ್ವಂಸಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ. Kalaburag
ಎಪ್ರಿಲ್ 29 ರಂದು ಕಾರಾಗೃಹದ ಬ್ಯಾರಕ್ ಗಳಲ್ಲಿ ಮೊಬೈಲ್ ನೆಟ್ವರ್ಕ್ ಸಿಗದಂತೆ ಹಾಕಲಾದ ಜಾಮರನ್ನು ಕೈದಿಗಳು ಒಡೆದು ಧ್ವಂಸ ಮಾಡಿರುವ ಘಟನೆ ನಡೆದಿದೆ. ಕೃತ್ಯಕ್ಕೆ ಸಂಬಂಧಿಸಿದಂತೆ 7 ಕೈದಿಗಳನ್ನು ಬೆಳಗಾವಿ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮೊಹಮ್ಮದ್ ಬೀರಾನ್ ಕುಟ್ಟಿ, ಫಿಹಿಮ್ ಪಟೇಲ್, ಸೈಯದ್ ತಲಾಹ ನೌಮಾನ್, ಸಂತೋಷ ಬಹೆಮನಿ ಅಲಿಯಾಸ್ ಪಾಟೀಲ್, ಮಜರ್ ಶೇಕ್ ಪಾಶಾ, ಪ್ರದೀಪ್ ಕುಮಾರ್ ಹಾಗೂ ಮೊಹಮ್ಮದ್ ನಸೀರ್ ಸ್ಥಳಾಂತರಗೊಂಡ ಕೈದಿಗಳು. ಜಾಮರ್ ಧ್ವಂಸ, ಕಾರಾಗೃಹದ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಫರತಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಓರ್ವ ಕೈದಿಯ ಪೋಷಕರು ಕಾರಾಗೃಹದಲ್ಲಿ ಹಣವಂತರು ಮತ್ತು ರಾಜಕೀಯ ಪ್ರಭಾವಿ ಹೊಂದಿರುವ ಕೈದಿಗಳು ನಡೆಸಿರುವ ಕೃತ್ಯವನ್ನು ಅಮಾಯಕನ ಮೇಲೆ ಹಾಕಿ ಬೇರೆ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಿದೆ ಎಂದು ಆರೋಪಿಸಿ, ಸಿಸಿಟಿವಿ ದೃಶ್ಯವಳಿಗಳನ್ನು ಸುಕ್ಷ್ಮವಾಗಿ ಪರಿಶೀಲಿಸಿ ವರ್ಗಾವಣೆ ರದ್ದುಪಡಿಸಬೇಕೆಂದು ಕೈದಿ ಪೋಷಕರು ಕಾರಾಗೃಹದ ಡಿಜಿಪಿ, ಕಾರಾಗೃಹದ ಮುಖ್ಯ ಆಧೀಕ್ಷಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಮೊತ್ತೊಂದೆಡೆ ಕಾರಾಗೃದಲ್ಲಿ ಕೈದಿ ಓರ್ವ ಡ್ರಗ್ ಸೇವನೆ ಮಾಡುತ್ತಿರುವ ಎನ್ನಲಾದ ವಿಡಿಯೋ ವೈರಲ್ ಆಗಿದೆ, ಅಲ್ಲದೇ ಜೈಲಿನಲ್ಲಿರುವ ಕೈದಿಗಳು ಸ್ಮಾರ್ಟ್ ಫೋನ್ ಬಳಿಸಿ ಅಶ್ಲೀಲ ವಿಡಿಯೋ ನೋಡುತ್ತಿರುವುದು, ಸಾಮಾಜಿಕ ಜಾಲತಾಣ ಖಾತೆಗಳನ್ನು ನಡೆಸುತ್ತಿರುವ ಮಾಹಿತಿ ಇದೀಗ ಹರಿದಾಡುತ್ತಿದೆ. ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಹಣಕೊಟ್ಟು ಕೈದಿಗಳು ರಾಜಾತಿಥ್ಯ ಪಡೆಯುತ್ತಿರುವ ಆರೋಪ ಮತ್ತೊಮ್ಮೆ ಕೇಳಿ ಬರುತ್ತಿದೆ.
ಕೇಂದ್ರ ಕಾರಾಗೃಹದ ಸುಧಾರಣಾ ಕಚೇರಿಯ ಕಣ್ಣುಗಾವಲಿನಲ್ಲಿ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಎಲ್ಲಾ ಬ್ಯಾರಕ್ ಮತ್ತು ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಆಳವಡಿಸುವ ಮೂಲಕ ಕೈದಿಗಳ ಮೇಲೆ ಹದ್ದಿನ ಕಣ್ಣು ಇಡುವುದು ಮತ್ತು ನಡೆಯುತ್ತಿರುವ ಎನ್ನಲಾಗುತ್ತಿರುವ ಎಲ್ಲಾ ಆಕ್ರಮಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ.