ಕಲಬುರಗಿ: ಕ್ರಿಕೆಟ್ ಆಡಲು ಹೋಗುವುದಾಗಿ ಹೇಳಿದ್ದ 17 ವರ್ಷದ ಮಗ ಕಾಣೆಯಾಗಿರುವ ಕುರಿತಾಗಿ ಚೌಕ್ ಪೊಲೀಸ್ ಠಾಣೆಗೆ ದೂರು ದಾಖಲಿಸಿ, 1 ವರ್ಷ ಕಳೆದರೂ ಆತನ ಪತ್ತೆಗೆ ಪೊಲೀಸರು ಸಹಕಾರ ನೀಡದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಕಾಣೆಯಾದ ಹುಡುಗನ ತಂದೆ ಫೀನಿಕ್ಸ್ ಶರಣಪ್ಪ ಹಂದಿಗನೂರು ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಗ ವಿನಾಯಕ ಫೀನಿಕ್ಸ್(17) ಕಾಣೆಯಾಗಿರುವ ಬಗ್ಗೆ ಕಳೆದ ವರ್ಷ 2024ರ ಮೇ 29 ರಂದು ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಬಳಿಕ ನಾನೂ ಕೂಡ ಮಗನ ಪತ್ತೆಗಾಗಿ ಹಲವು ಕಡೆಗಳಲ್ಲಿ ಸುತ್ತಾಡಿ 6 ತಿಂಗಳು ಕಳೆದೆ. ಮಗನ ಪತ್ತೆಯ ಕುರಿತಾಗಿ ಮಾಹಿತಿಗಾಗಿ ಆಗಾಗ ಪೊಲೀಸ್ ಠಾಣೆಗೆ ಹೋದರೆ ಅಲ್ಲಿನ ಪಿಎಸ್ಐ, ಸಿಬ್ಬಂದಿಯವರು ನಿರ್ಲಕ್ಷ ಮಾಡಿದ್ದಾರೆ. ಪದೇ ಪದೇ ಕೇಳುತ್ತಾ ಹೋದಂತೆ ಅಲ್ಲಿನ ಪೊಲೀಸ್ ಇನ್ಸ್ಪೆಕ್ಟರ್ ಅವರು ನನಗೆ ಬೆದರಿಕೆ ಹಾಕಿದ್ದಾರೆ ಎಂದರು.
ಅವಾಚ್ಯ ಶಬ್ದಗಳಿಂದ ಬೈದ ಪೊಲೀಸ್ ಇನ್ಸ್ಪೆಕ್ಟರ್ ಅವರು ನಗರದಲ್ಲಿ ಹೇಗೆ ಜೀವನ ಮಾಡುತ್ತಿಯಾ? ನಿನಗೆ ಸುಮ್ಮನೆ ಬಿಡುವುದಿಲ್ಲ, ನಿನ್ನ ಮೇಲೆಯೇ ಪ್ರಕರಣ ದಾಖಲಿಸಿ ಜೈಲಿಗಟ್ಟಿಸುವೆ ಎಂದು ಎಗರಾಡಿದ್ದಾರೆ. ಹಾಗಾಗಿ ಅವರ ವಿರುದ್ಧ ಕಲಬುರಗಿ ಪೀಠದ ಹೈಕೋರ್ಟ್ ಗೆ ಹೋಗಿ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿ ಹಾಕಿದ್ದೇನೆ. ಮನವಿ ಪುರಸ್ಕರಿಸಿದ ಕೋರ್ಟ್, ನನ್ನ ಮಗನನ್ನು ಹುಡುಕಿ ಕೊಡಬೇಕೆಂದು ಪೊಲೀಸರಿಗೆ ನಿರ್ದೇಶನ ನೀಡಿದೆ. ಆದರೆ ಪೊಲೀಸರು ನ್ಯಾಯಾಂಗ ನಿಂದನೆ ಮಾಡಿದ್ದಲ್ಲದೆ, ನನ್ನ ಮಗನನ್ನು ಪತ್ತೆ ಹಚ್ಚಲು ನಿರ್ಲಕ್ಷ್ಯ ಮಾಡುತ್ತಿದ್ದಾರೆ, ಮಗನ ಹುಡುಕಾಟಕ್ಕೆ ಸಿಬ್ಬಂದಿಗಳು ಇಲ್ಲ ಎಂದೂ ನೆಪ ಹೇಳಿದ್ದಾರೆ ಎಂದು ದೂರುದಾರ ಫೀನಿಕ್ಸ್ ದೂರಿದ್ದಾರೆ.
ಕೂಡಲೇ ಪೊಲೀಸರು ನನ್ನ ಮಗನನ್ನು ಹುಡುಕಿ ಕೊಡಬೇಕೆಂದು ತಂದೆ ಫೀನಿಕ್ಸ್ ಅವರು ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಸಂಜೀವ್ ಕುಮಾರ್ ಡೋಂಗರಗಾವ್, ವಿನೋದಕುಮಾರ್ ಜನೆವರಿ, ಶಿವರಾಯ ಮತ್ತಿತರರು ಇದ್ದರು.