ಕಲಬುರಗಿ: ಚಿತ್ತಾಪೂರ ಪಟ್ಟಣದಲ್ಲಿ ತಿರಂಗಾ ಯಾತ್ರೆ ಕಾರ್ಯಕ್ರಮಕ್ಕೆ ಆಗಮಿಸಿದ ಬಿಜೆಪಿ ಪಕ್ಷದ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಚಲುವಾದಿ ನಾರಾಯಣಸ್ವಾಮಿ ಅವರನ್ನು ಅಲ್ಲಿನ ಪ್ರವಾಸಿ ಮಂದಿರದಲ್ಲಿ 5 ಗಂಟೆಗಳ ಕಾಲ ಕಾಂಗ್ರೆಸ್ ನವರು ದಿಗ್ಬಂಧನ ಹಾಕಿರುವುದು ಖಂಡನೀಯ ಎಂದು ಬಿಜೆಪಿ ಓಬಿಸಿ ಮೋರ್ಚ ಜಿಲ್ಲಾ ಸಂಚಾಲಕ ಬಸವರಾಜ ಮದ್ರಿಕಿ ಆಕ್ರೋಶ ವ್ಯಕ್ತಪಡಿಸಿದರು.
ಶಹಾಬಾದ್ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಸ್ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾದ ಅಂಬರಾಯ ಅಷ್ಟಗಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾರಿನ ಮೇಲೆ ಪೆನ್ನಿನ ಇಂಕ್ ಚೆಲ್ಲಿ ಅವರನ್ನು ತಿರಂಗಾ ಯಾತ್ರೆಯಲ್ಲಿ ಭಾಗವಹಿಸದಂತೆ ಮಾಡಿದ ಜಿಲ್ಲಾ ಆಡಳಿತ ಮತ್ತು ಪೋಲಿಸ್ ಇಲಾಖೆ ಸೂಕ್ತ ಭದ್ರತೆ ನೀಡದೆ ಇರುವುದು ಖಂಡನೀಯ, ಇಂಥ ನಡೆ ಸಂವಿಧಾನ ವಿರೋಧಿಯಾಗಿದೆ ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ನಾಯಿಗೆ ಹೋಲಿಸಿ ಮಾತನಾಡುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರು ಫೋನ್ ಕರೆ ಮಾಡಿ ಎಲ್ಲಾ ತಿಳಿಸಿದ ನಂತರ ಮಾಧ್ಯಮದ ಜೊತೆಗೆ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಕ್ಷಮೆ ಕೇಳಿದರೂ ಕೂಡ ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಒಬ್ಬ ದಲಿತ ನಾಯಕರನ್ನು ಸೂಕ್ತ ರಕ್ಷಣೆ ಇಲ್ಲದೆ ಹೋದರೆ ಇನ್ನು ಸಾಮಾನ್ಯ ಜನರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕನಕಪ್ಪ ದಂಡಗುಲ್ಕರ್, ಬಸವರಾಜ ಬಿರಾದರ, ಮೋಹನ ಹಳ್ಳಿ, ಸಿದ್ರಾಮ ಕುಸಾಳೆ, ಬಸವರಾಜ ಹಡಪದ ಉಪಸ್ಥಿತರಿದ್ದರು.