ಕಲಬುರಗಿ: ಕಳ್ಳಭಟ್ಟಿ ಸಾರಾಯಿ ಮತ್ತು ನಕಲಿ ಮದ್ಯ, ಅಕ್ರಮ ಸೇಂದಿ ಸಂಗ್ರಹ ಮತ್ತು ಮಾರಾಟವನ್ನು ತಡೆಗಟ್ಟಲು ಪ್ರತಿಯೊಬ್ಬ ಅಧಿಕಾರಿಯು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ಕಲಬೆರಕೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ರಚಿಸಲಾದ ಸ್ಥಾಯಿ ಸಮಿತಿ ಸಭೆ ನಡೆಸುವ ಕುರಿತು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಇಂತಹ ಅಕ್ರಮ ಮಾರಾಟದಲ್ಲಿ ಭಾಗಿಯಾದವರ ವಿರುದ್ಧ ಕಾನೂನಿನ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಬೇಕು ಎಂದರು.
ಜಿಲ್ಲೆಯಲ್ಲಿ ವಿಶೇಷವಾಗಿ ತಾಂಡಾ, ಸ್ಲಂ ಏರಿಯಾಗಳು ಕೆಲವೊಂದು ಸಣ್ಣಪುಟ್ಟ ಪ್ರದೇಶಗಳಲ್ಲಿ ಹಣವನ್ನು ಗಳಿಸುವ ದುರಾಸೆಗೆ ಒಳಗಾಗಿ ಅಕ್ರಮವಾಗಿ ನಕಲಿ ಮದ್ಯ ಮಾರಾಟ, ಅಕ್ರಮ ಸೇಂದಿ ಮಾರಾಟ ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧವಾಗಿ ಅಬಕಾರಿ ಇಲಾಖೆ ಮತ್ತು ಪೋಲಿಸ್ ಇಲಾಖೆಯವರು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಾಗ ಮಾತ್ರ ಅಪರಾಧಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯ ಎಂದರು.
ಅಬಕಾರಿ ಇಲಾಖೆ ವತಿಯಿಂದ ದಾಖಲಾದ ಪ್ರಕರಣಗಳ ಕುರಿತು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಡಾ. ಸಂಗಣ್ಣ ಗೌಡ ಹೊಸಳ್ಳಿ ಇವರು ಕಳೆದ ಮೂರು ವರ್ಷಗಳಲ್ಲಿ ದಾಖಲಾದ ಕಳ್ಳಭಟ್ಟಿ ಹಾಗೂ ಅಕ್ರಮ ಸೇಂದಿ ಪ್ರಕರಣಗಳ ಕುರಿತು ಜಿಲ್ಲಾಧಿಕಾರಿಯವರಿಗೆ ಮಾಹಿತಿಯನ್ನು ನೀಡಿದರು.
ಕಳ್ಳಭಟ್ಟಿ ಸಾರಾಯಿಯಲ್ಲಿ ದಾಖಲಾದ ಪ್ರಕರಣಗಳ ವಿವರ :
2022-23 ರಲ್ಲಿ ಕಳ್ಳಭಟ್ಟಿ ಸರಾಯಿಲ್ಲಿ 43 ಪ್ರಕರಣಗನ್ನು ದಾಖಲಿಸಿ 206 ಲೀ ಕಳ್ಳಭಟ್ಟಿ ಸಾರಾಯಿಯ ಮುದ್ದೆಮಾಲನ್ನು ಜಪ್ತಿಯನ್ನು ಮಾಡಲಾಯಿತು.2023-24 ರಲ್ಲಿ 25 ಪ್ರಕರಣಗಳನ್ನು ದಾಖಲಿಸಿ 108 ಲೀ 2024-25 ರಲ್ಲಿ 19 ಪ್ರಕರಣಗಳನ್ನು ದಾಖಲಿಸಿ 83 ಲೀ ಜಪ್ತಿ ಮತ್ತು ಮುದ್ದೆಮಾಲನ್ನು ಜಪ್ತಿಯನ್ನು ಮಾಡಲಾಯಿತು.
ಅಕ್ರಮ ಸೇಂದಿ ಕುರಿತು ದಾಖಲಾದ ಪ್ರಕರಣಗಳ ವಿವರ:
2022-23 ರಲ್ಲಿ 66 ಪ್ರಕರಣಗಳನ್ನು ದಾಖಲಿಸಿ 2428 ಲೀಟರ್ ಅಕ್ರಮ ಸೇಂದಿಯ ಮುದ್ದೆಮಾಲನ್ನು ಜಪ್ತಿಮಾಡಲಾಯಿತು, 2023-24 ರಲ್ಲಿ 57 ಪ್ರಕರಣಗಳನ್ನು ದಾಖಲಿಸಿ 2513 ಲೀಟರ್, 2024-25 ರಲ್ಲಿ 29 ಪ್ರಕರಣಗಳ್ನು ದಾಖಲಿಸಿ 1413 ಲೀಟರ್ ಜಪ್ತಿ ಮತ್ತು ಮುದ್ದೆಮಾಲನ್ನು ಜಪ್ತಿಯನ್ನು ಮಾಡಲಾಯಿತು ಎಂದು ಅಬಕಾರಿ ಅಧೀಕ್ಷಕರು ರವೀಂದ್ರ ಪಾಟೀಲ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.
ಆರ್ಥಿಕವಾಗಿ ದುರ್ಬಲರಾದವರು ನಿರುದ್ಯೋಗಿ ಯುವಕರು ಹಣವನ್ನು ಸಂಪಾದನೆಯನ್ನು ಮಾಡುವ ಸುಲಭ ಮಾರ್ಗವಾಗಿ ಹೆಚ್ಚಿನ ಪ್ರಮಾಣದಲ್ಲಿ ತಾಂಡಾ ಪ್ರದೇಶಗಳಲ್ಲಿ ಇಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಸೇಡಂ, ಚಿಂಚೋಳಿ, ಚಿತ್ತಾಪೂರ, ಶಹಾಬಾದ ಕೆಲವೊಂದು ಗಡಿಪ್ರದೇಶಗಳಲ್ಲಿ ಚೆಕ್ಪೊಸ್ಟ್ಗಳಲ್ಲಿ ನಿಗಾವಹಿಸಿ ಇಂತಹ ಅಕ್ರಮ ಸಾಗಾಟ ತಡೆಗಟ್ಟಬೇಕು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು, ಗ್ರಾಮೀಣ ಪ್ರದೇಶಗಳಿಗೆ ಸಾರ್ವಜನಿಕರಿಗೆ. ರೈತರಿಗೆ ಇಂತಹ ಅಕ್ರಮ ಸಾಗಟದಿಂದಾಗುವ ದುಷ್ಪರಿಣಾಮಗಳು ಮತ್ತು ಕಾನೂನು ಕ್ರಮಗಳ ಕುರಿತು ಜಾಗೃತಿಯನ್ನು ಮೂಡಿಸಬೇಕೆಂದು ತಿಳಿಸಿದರು.
ಅಬಕಾರಿ ಇಲಾಖೆಯ ಬೆಳಗಾವಿ ಕೇಂದ್ರ ಸ್ಥಾನದ ಜಾರಿ ಮತ್ತು ಅಪರಾಧ ವಿಭಾಗದ ಅಪರ ಆಯುಕ್ತರಾದ ಡಾ. ಮಂಜುನಾಥ ಮಾತನಾಡಿ, ಕಳ್ಳಭಟ್ಟಿ ಕಲಬೆರಿಕೆ ಸೇಂದಿ ಮಾರಾಟದೊಂದಿಗೆ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಅವ್ಯಾಹತವಾಗಿ ಮಾರಾಟವಾಗುತ್ತಿದ್ದು, ಇದರಿಂದ ಸಾರ್ವಜನಿಕರು ಮತ್ತು ಯುವಜನಾಂಗದ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಮಾತನಾಡಿ, ಜಿಲ್ಲೆಯಲ್ಲಿ ಇಂತಹ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆ ಮಾಹಿತಿ ನೀಡಿದ್ದಾಗ ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಗಳಿಗೆ ಭೇಟಿ ನೀಡಿ ಮಾದಕ ಪದಾರ್ಥಗಳನ್ನು ವಶಪಡಿಸಿಕೊಂಡು ಇಂತಹ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದ್ದವರ ಮೇಲೆ ಕಾನೂನು ಕ್ರಮ ಜರುಗಿಸಿ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದರು.
ವೇದಿಕೆ ಮೇಲೆ ಡಿಸಿಪಿ ಕನಿಕಾ ಸಿಕ್ರಿವಾಲ, ಅಬಕಾರಿ ಅಧೀಕ್ಷರಾದ ಎಚ್.ಎಸ್. ವಜ್ರಮಟ್ಟಿ, ಅಬಕಾರಿ ಉಪ ಅಧೀಕ್ಷಕರಾದ ರವೀಂದ್ರ ಪಾಟೀಲ, ಅಬಕಾರಿ ಅಧೀಕ್ಷಕ ರಾಮನ ಗೌಡ, ಶಹಾಬಾದ ಡಿವೈಎಸ್ಪಿ ಶಂಕರ ಗೌಡ ಪಾಟೀಲ, ಚಿಂಚೋಳಿ ಡಿವೈಎಸ್ಪಿ ಹಿರೇಮಠ ಸೇರಿದಂತೆ ಎಲ್ಲ ತಾಲ್ಲೂಕುಗಳ ವಲಯ ಅಬಕಾರಿ ನಿರೀಕ್ಷಕರು ಹಾಜರಿದ್ದರು.