ಕಲಬುರಗಿ| ಕಳಪೆ ಬೀಜ, ನಕಲಿ ರಸಗೊಬ್ಬರ ಮಾರಾಟಗಾರರ ವಿರುದ್ಧ ಕೇಸ್: ಜಿಲ್ಲಾಧಿಕಾರಿ

Date:

Share post:

ಕಲಬುರಗಿ: ಕಳಪೆ ಬೀಜ ಹಾಗೂ ನಕಲಿ ರಸಗೊಬ್ಬರ ಮಾರಾಟ ಕುರಿತಂತೆ ರೈತರಿಂದ ದೂರು ಕೇಳಿಬಂದಲ್ಲಿ ತಕ್ಷಣವೇ ಪೊಲೀಸ್ ದೂರು ದಾಖಲಿಸಿ, ಸಂಬಂಧಿಸಿದ ಅಧಿಕಾರಿಗಳು ಕಾಲ-ಕಾಲಕ್ಕೆ ಖಾಸಗಿ ಅಥವಾ ಯಾವುದೇ ವಿತರಕರ ಅಂಗಡಿಗಳಿಗೆ ಅಚಾನಕ್ಕಾಗಿ ಭೇಟಿ ನೀಡುವ ಮೂಲಕ ಪರಿಶೀಲಿಸಬೇಕು, ರೈತರಿಗೆ ಯಾವುದೇ ತೊಂದರೆಯಾದ ದೂರುಗಳು ಬಂದಲ್ಲಿ ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಫೌಜಿಯಾ ತರುನ್ನಮ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

 

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃಷಿ ಸಂಬಂಧಿತ ಇಲಾಖೆಗಳ ಸಭೆಯ ಅಧ್ಯಕ್ಷತೆವಹಿಸಿ ಅವರು 2025-26ನೇ ಸಾಲಿನ ಕೃಷಿ ಇಲಾಖೆಯ ಕೇಂದ್ರ ಪುರಸ್ಕೃತ ಯೋಜನೆಗಳ ಕೃಷಿ ಯಾತ್ರಿಕರಣ ಉಪ ಅಭಿಯಾನ,ಸೂಕ್ಷ್ಮ ನೀರಾವರಿ ಅನುಷ್ಠಾನ, ಕಬ್ಬಿನ ಬೆಳೆ ಹಾಗೂ ಬೆಳೆ ಸಮೀಕ್ಷೆ ಕ್ರಿಯಾ ಯೋಜನೆ ಅನುಮೋದನೆ ಸೇರಿದಂತೆ ಜಿಲ್ಲೆಯ ಕೃಷಿ ಮತ್ತು ರೈತರ ಸಮಸ್ಯೆಗಳ ಕುರಿತು ಚರ್ಚಿಸಿದರು.

 

ವಿವಿಧ ಇಲಾಖೆಗಳ ವರದಿಯನ್ನು ಪರಿಶೀಲಿಸಿ ನಂತರ ಮಾತನಾಡಿದ ಅವರು ಮುಂಗಾರು ಆರಂಭವಾಗಿರುವ ಹಿನ್ನಲೆಯಲ್ಲಿ ಬಿತ್ತನೆ ಬೀಜಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಪ್ರತಿ ತಾಲ್ಲೂಕಿಗೆ ಯಾವುದೇ ದೂರುಗಳಿಲ್ಲದೆ ವಿತರಿಸಬೇಕು. ಸೋಯಬೀನ್ ಬಿತ್ತನೆ ಬೀಜಗಳ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಬೇಕು, ರಸಗೊಬ್ಬರ ಸಹ ಸಾಕಷ್ಟು ಪ್ರಮಾಣದಲ್ಲಿ ಕಾದಿರಿಸಬೇಕು ಎಂದು ಹೇಳಿದರು.

 

ರೈತರಿಗೆ ರಸಗೊಬ್ಬರ ಬಳಕೆ, ಒಂದೇ ತರಹದ ಬೆಳೆ ಬೆಳೆಯಬಾರದು ಎಂಬುದನ್ನು ತಿಳಿ ಹೇಳಬೇಕು, ಸ್ಥಳೀಯ ಮಾದರಿ ರೈತರೊಂದಿಗೆ ನೇರವಾಗಿ ಹಳ್ಳಿಗಳಿಗೆ ಹೋಗಿ ಚಿಕ್ಕ ರೈತರಿಗೆ ಬೆಳೆಗಳನ್ನು ಬದಲಾಯಿಸುವ ಮತ್ತು ಬೆಳೆಯುವ ಕುರಿತು ಅರಿವು ಮೂಡಿಸಬೇಕು.

ಸರ್ಕಾರದ ವಿವಿಧ ಯೋಜನೆಗಳ ಅಡಿ ರೈತರಿಗೆ ವಿತರಿಸುವ ಕೃಷಿ ಸಂಬಂಧಿತ ಯಂತ್ರಗಳು ಸೇರಿದಂತೆ ಹನಿ ನೀರಾವರಿ, ಸ್ಪ್ರಿಂಕಲರ್ ಹಾಗೂ ಇತರೆ ರೈತಸ್ನೇಹಿ ಸಲಕರಣೆಗಳ ಕುರಿತ ಅರ್ಜಿಗಳ ತ್ವರಿತ ವಿಲೇವಾರಿಯಾಗಬೇಕು.

 

ನವ ಮಾಧ್ಯಮವನ್ನು ಬಳಸಿಕೊಂಡು ಮಾದರಿ ರೈತರ ಕುರಿತು ಚಿಕ್ಕ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಲ್ಲಿ ಇತರೆ ರೈತರಿಗೆ ಸ್ಪೂರ್ತಿಯಾಗುತ್ತದೆ. ಈಗಂತೂ ಪ್ರತಿಯೊಬ್ಬರು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವ ಕಾಲದಲ್ಲಿ ಅವುಗಳನ್ನು ಬಳಸಿಕೊಂಡು ಪ್ರಚಾರ ಕೈಗೊಳ್ಳಬೇಕು.

 

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಯೋಜನೆಯಡಿ ರೈತರ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಅವರಿಗೆ ಟ್ರಾಕ್ಟರ್, ಪವರ್ ಟಿಲ್ಲರ್, ನೇಗಿಲು, ರೊಟೋವೇಟರ್ ನೀಡಲು ಕ್ರಮಕೈಗೊಳ್ಳಿ, ಶೇ 100% ರಷ್ಟು ಸಾಧನೆ ಮಾಡಿದಲ್ಲಿ ಸರ್ಕಾರದಿಂದ ಹೆಚ್ಚುವರಿಯಾಗಿ ಟಾರ್ಗೆಟ್ ಪಡೆದು ಕೆಲಸ ಮಾಡೋಣ.

 

ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸರ್ಕಾರದ ಯೋಜನೆಗಳ ಲಾಭ ಪಡೆದು ಅತ್ಯುತ್ತಮ ರೈತರಾಗಿ ದುಡಿಯುತ್ತಿರುವವರನ್ನು ಗುರುತಿಸಬೇಕು. ಅವರ ಹೊಲಗಳಿಗೆ ಕೃಷಿ ಅಧಿಕಾರಿಗಳು ನೇರವಾಗಿ ಬೇಟಿ ನೀಡಿ ಸ್ಥಳೀಯರೊಂದಿಗೆ ಚಿಕ್ಕದಾಗಿ ಸಂವಾದವನ್ನು ಹಮ್ಮಿಕೊಳ್ಳಬೇಕು.

 

ಮುಂಗಾರು ವಾಡಿಕೆಗಿಂತ ಈ ವರ್ಷ ಮುಂಚಿತವಾಗಿಯೇ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆಗೆ ಮತ್ತು ಬೆಳೆ ವಿಮೆಗಳಿಗೆ ಸಂಬಂಧಿಸಿದಂತೆ ರೈತರಲ್ಲಿ ಅರಿವು ಮೂಡಿಸಬೇಕು, ಬೆಳೆ ಸರ್ವೆಯಲ್ಲಿ ಗೊಂದಲಗಳಾಗಬಾರದು, ರೈತರ ಮೋಬೈಲಿನಿಂದಲೇ ಅವರಿಂದ ಅರ್ಜಿ ಸಲ್ಲಿಸಲು ಪ್ರೇರೆಪಿಸಬೇಕು.

 

ಬೆಳೆ ಸಮೀಕ್ಷೆಗೆ ಸಂಬಂಧಿಸದಂತೆ ಇರುವ ತಾಂತ್ರಿಕ ಸಮಸ್ಯೆಗಳಿಗೆ ಸಂಬಂಧಿಸಿದ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಬೇಕು. ತಾಲ್ಲೂಕುವಾರು ನಕ್ಷೆಯಲ್ಲಿ ಕಾಣದ ಗ್ರಾಮಗಳನ್ನು ಗುರುತಿಸುವ ಕಾರ್ಯ ನಡೆಸಿ ರಾಜ್ಯಮಟ್ಟದ ಅಧಿಕಾರಿಗಳ ಗಮನಕ್ಕೆ ತರಬೇಕು.

 

ರೈತರಿಗೆ ಅಗತ್ಯ ಮಾಹಿತಿ ಹಾಗೂ ಅರಿವು ಮೂಡಿಸಲು ತರಬೇತಿ ನೀಡಬೇಕು, ಬೆಳೆಗಳಿಗೆ ಯಾವ ಯಾವ ಸಂದರ್ಭದಲ್ಲಿ ಏನನ್ನು ಹಾಕಬೇಕು, ಯಾವ ಮಣ್ಣಲ್ಲಿ ಯಾವ ಬೆಳೆಯನ್ನು ಬೆಳೆಯಬೇಕು ಎನ್ನುವುದರ ಕುರಿತು ಸಣ್ಣ-ಸಣ್ಣ ಗುಂಪುಗಳನ್ನಾಗಿ ಮಾಡಿ ತರಬೇತಿ ನೀಡಬೇಕು. ಅಂತಹ ತರಬೇತಿಗಳಿಗೆ ನನ್ನನ್ನು ಸಹ ಆಹ್ವಾನಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

 

ರೈತರಿಗೆ ಸಾಲ ನೀಡುವ ಕುರಿತಂತೆ ಸಹಕಾರಿ ಬ್ಯಾಂಕಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳು ವಿನಾಕರಣ ತೊಂದರೆ ನೀಡಬಾರದು, ಬೆಳೆ ವಿಮಗೆ ಸಂಬಂಧಿಸಿದಂತೆ ರೈತರೊಂದಿಗೆ ಮಾನವೀಯತೆಯಿಂದ ವರ್ತಿಸಿ. ರೈತರು ಸಾಲಗಳಿಗೆ ಸಂಬಂಧಿಸಿದಂತೆ ದೂರುಗಳು ಕೇಳಿ ಬಂದಲ್ಲಿ ಬ್ಯಾಂಕನವರನ್ನು ಜವಬ್ಧಾರಿಯನ್ನಾಗಿಸಲಾಗುವುದು.

 

ಸಭೆಯಲ್ಲಿ ಮುಖ್ಯವಾಗಿ ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಬೆಳೆಗೆ ನೋಂದಣಿ ಮಾಡಿದಂತಹ ರೈತರ ಬೆಳೆ ಸಮೀಕ್ಷೆಯ ದತ್ತಾಂಶದ ಪ್ರಕಾರ ತೊಗರಿ ಬೆಳೆ ಇರುವುದನ್ನು ಪರಿಶೀಲಿಸುವುದು, ಪ್ರಸ್ತುತ ಸಂಧರ್ಭದಲ್ಲಿ ಸ್ಪಷ್ಟ ಅಭಿಪ್ರಾಯದೊಂದಿಗೆ ನೊಂದಣಿ ಮಾಡಿದ ರೈತವಾರು ಪಟ್ಟಿ ಸಲ್ಲಿಸುವುದು ಸೇರಿದಂತೆ ಇನ್ನಿತರ ಮೂಲಗಳ ದತ್ತಾಂಶವನ್ನು ಸಂಗ್ರಹಿಸಿ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.

 

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೊಗರಿ ಬೆಳೆಯ ಅವಕದ ಬಗ್ಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೊಗರಿ ಮಾರಾಟ ಮಾಡಿರುವ ಬಗ್ಗೆ, ದಾಲ್ ಮಿಲ್ ಗಳಿಗೆ ತೊಗರಿ ಸರಬರಾಜು ಮಾಡಿರುವ ಬಗ್ಗೆ ಪರಿಶೀಲಿಸಿ, ತಾಲ್ಲೂಕುವಾರು ಹಿಂದಿನ ಸಾಲಿನೊಂದಿಗೆ ತುಲನೆ ಮಾಡಿ ಒಂದು ವೇಳೆ ಹಿಂದಿನ ಸಾಲಿಗೆ ಹೋಲಿಸಿದಲ್ಲಿ, ಇಳುವರಿ ಹೆಚ್ಚಾಗಿದೆಯೇ ಅಥವಾ ಕಡಿಮೆಯಾಗಿದೆಯೇ? ಎಂಬ ಬಗ್ಗೆ, ಸ್ಪಷ್ಟ ಅಭಿಪ್ರಾಯ ನೀಡುವಂತೆ ಹೇಳಿದರು.

ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್, ಕೃಷಿ, ತೋಟಗಾರಿಕೆ, ರೇಷ್ಮೆ, ಭೂ ದಾಖಲೆಗಳು ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಖಾಸಗಿ ಹಾಗೂ ಸಹಕಾರಿ ಬ್ಯಾಂಕುಗಳ, ಖಾಸಗಿ ಸಕ್ಕರೆ ಕಾರ್ಖಾನೆಗಳ ಮತ್ತು ನಬಾರ್ಡ್ ಹಿರಿಯಅಧಿಕಾರಿಗಳು ಸಹ ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ವಿದ್ಯುತ್ ಪ್ರವಹಿಸಿ ಮಹಿಳೆ ಸಾವು

ಕಲಬುರಗಿ: ಮನೆ ಚಾವಣಿಯ ಮೇಲೆ ಒಣ ಹಾಕಿದ್ದ ಬಟ್ಟೆ ತೆಗೆಯಲು ತೆರಳಿದ...

ಕಲಬುರಗಿ: ಕಾರು – ಬೈಕ್ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

ಕಲಬುರಗಿ: ಶಹಾಬಾದ್ ಸಮೀಪದ ಸಣ್ಣೂರ ರಸ್ತೆಯ ವಾಡಾ ತಾಂಡಾ ಕ್ರಾಸ್ ಸಮೀಪ...

ಜೂ.29ಕ್ಕೆ ‘ಹೃದಯವಂತ’ ಅಭಿನಂದನಾ ಗ್ರಂಥ ಬಿಡುಗಡೆ: ಬಿ.ಎಚ್ ನಿರಗುಡಿ 

ಕಲಬುರಗಿ: ಇದೇ ಜೂನ್ 29 ರಂದು ನಗರದ ಕೂಸನೂರ್ ರಸ್ತೆಯ ಜಯನಗರದಲ್ಲಿರುವ...