ಕಲಬುರಗಿ: ಕಲಬುರಗಿ ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಈವರೆಗೆ ತೊಗರಿ, ಹೆಸರು, ಉದ್ದು, ಸೋಯಾಅವರೆ, ಸೂರ್ಯಕಾಂತಿ ಹಾಗೂ ಮೆಕ್ಕೆಜೋಳ ಸೇರಿದಂತೆ ಒಟ್ಟು 16,054 ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದ್ದು, ಇದರಲ್ಲಿ 11,568 ಕ್ವಿ. ಬೀಜ ರೈತರಿಗೆ ವಿತರಣೆ ಮಾಡಲಾಗಿದ್ದು, 4,486 ಕ್ವಿ. ಬಿತ್ತನೆ ಬೀಜ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿರುತ್ತದೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.
ಪ್ರಸಕ್ತ 2025-26ನೇ ಸಾಲಿನ ಮುಂಗಾರು ಹಂಗಾಮಿನ ಬೀಜಗಳ ಪೂರೈಕೆ ಕಾರ್ಯಕ್ರಮದಡಿ ಕೇಂದ್ರ ಕಚೇರಿಯಿಂದ ಒಟ್ಟು 27,814 ಕ್ವಿ. ಬಿತ್ತನೆ ಬೀಜಗಳ ಕಾರ್ಯಕ್ರಮ ನೀಡಲಾಗಿದ್ದು, ಸದರಿ ಕಾರ್ಯಕ್ರಮದ ಅನುಗುಣವಾಗಿ ಸಂಬಂಧಪಟ್ಟ ಬಿತ್ತನೆ ಬೀಜ ಸರಬರಾಜು ಸಂಸ್ಥೆಗಳಿಗೆ 35,806 ಕ್ವಿ. ಇಂಡೆಂಟ್ ನೀಡಲಾಗಿದೆ.
ಅದೇ ರೀತಿ ಜಿಲ್ಲೆಗೆ 15562.39 ಕ್ವಿ. ಸೋಯಾಅವರೆ ಬೀಜದ ಕಾರ್ಯಕ್ರಮ ನೀಡಲಾಗಿದ್ದು, ಸಂಬಂಧಪಟ್ಟ ಸರಬರಾಜು ಸಂಸ್ಥೆಗಳಿಗೆ 25,925 ಕ್ವಿ. ಇಂಡೆಂಟ್ ನೀಡಲಾಗಿದ್ದು, ಇಲ್ಲಿಯವರೆಗೆ 10,771 ಕ್ವಿ. ಸರಬರಾಜು ಮಾಡಲಾಗಿದ್ದು, ಅದರಲ್ಲಿ 10,470 ಕ್ವಿ ಸೋಯಾಅವರೆ ಬೀಜ ರೈತರಿಗೆ ವಿತರಣೆ ಮಾಡಲಾಗಿದ್ದು, 300 ಕ್ವಿ. ಬೀಜ ಲಭ್ಯವಿರುತ್ತದೆ. ಬಹುತೇಕ ಪ್ರಮಾಣ ಸೋಯಾಅವರೆ ಬೀಜ ಮಧ್ಯಪ್ರದೇಶದ ಇಂದೋರ ನಗರದಿಂದ ಸರಬರಾಜು ಆಗುತ್ತಿದ್ದು, ಕಳೆದ ಮೂರು-ನಾಲ್ಕು ದಿನದಿಂದ ಇಂದೋರನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಳಿದ ಪ್ರಮಾಣದ ಸೋಯಾಅವರೆ ಬೀಜ ಸರಬರಾಜು ವಿಳಂಬವಾಗುತ್ತಿದ್ದು, 2-3 ದಿನಗಳಲ್ಲಿ ಉಳಿದ ಸೋಯಾಅವರೆ ಬೀಜ ರೈತರಿಗೆ ವಿತರಿಸಲು ಕ್ರಮ ಜರುಗಿಸಲಾಗುತ್ತಿದ್ದು, ಬೀಜದ ಕೊರತೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಮುಂದುವರೆದು 2025-26ನೇ ಸಾಲಿನ ಮುಂಗಾರು ಹಂಗಾಮಿಗೆ 89,898 ಮೆ.ಟನ್ ರಸಗೊಬ್ಬರ ಜಿಲ್ಲೆಗೆ ಹಂಚಿಕೆಯಾಗಿದ್ದು, ಏಪ್ರಿಲ್ ನಿಂದ ಜೂನ್ ಮಾಹೆವರೆಗಿನ ಬೇಡಿಕೆಯು 44,037 ಮೆ.ಟನ್ ಇರುತ್ತದೆ. ಇಲ್ಲಿಯವರೆಗೆ 52,070 ಮೆ.ಟನ್ ರಸಗೊಬ್ಬರ ಜಿಲ್ಲೆಗೆ ಪೂರೈಕೆಯಾಗಿದ್ದು, 24,248 ಮೆ.ಟನ್ ವಿತರಣೆಯಾಗಿದ್ದು, 27,822 ಮೆ.ಟನ್ ನಷ್ಟು ಲಭ್ಯವಿರುತ್ತದೆ. ಡಿ.ಎ.ಪಿ ರಸಗೊಬ್ಬರಕ್ಕೆ ಸಂಬಂಧಿಸಿದಂತೆ ಜೂನ್ ಮಾಹೆವರೆಗೆ 18,425 ಮೆ. ಟನ್ ಬೇಡಿಕೆ ಇರುತ್ತದೆ. ಇಲ್ಲಿಯವರೆಗೆ 16,047 ಮೆ. ಟನ್ ಡಿ.ಎ.ಪಿ ರಸಗೊಬ್ಬರ ಸರಬರಾಜು ಆಗಿದ್ದು, 9,075 ಮೆ. ಟನ್ ನಷ್ಟು ವಿತರಣೆ ಮಾಡಲಾಗಿದ್ದು, 6,972 ಮೆ. ಟನ್ ಡಿ.ಎ.ಪಿ ರಸಗೊಬ್ಬರ ಮಾರಾಟಗಾರರಲ್ಲಿ ಲಭ್ಯವಿರುತ್ತದೆ. 2,400 ಮೆ.ಟನ್ ಡಿ.ಎ.ಪಿ. ಸರಬರಾಜಿಗೆ ಬೇಡಿಕೆ ಕೇಂದ್ರ ಕಛೇರಿಗೆ ಮನವಿಯನ್ನು ಸಲ್ಲಿಸಿದ್ದು, ಮುಂದಿನ 8-10 ದಿನಗಳಲ್ಲಿ ಉಳಿದ 2,400 ಮೆ.ಟನ್ ಡಿ.ಎ.ಪಿ ರಸಗೊಬ್ಬರವನ್ನು ಪಿ.ಎ.ಸಿ.ಎಸ್., ಎಫ್ಪಿಓಎಸ್ (PACs, FPOs) ಹಾಗೂ ಖಾಸಗಿ ಮಾರಾಟಗಾರರ ಮೂಲಕ ವಿತರಿಸಲು ಕ್ರಮ ಜರುಗಿಸಲಾಗುತ್ತದೆ.
ವೈಜ್ಞಾನಿಕವಾಗಿ ಭೂಮಿಗೆ ಬಳಸುವ (ಎನ್:ಪಿ:ಕೆ) (N:P:K) ಅನುಪಾತ 4:2:1 ಇರಬೇಕಿದ್ದು, ಕಲಬುರಗಿ ಜಿಲ್ಲೆಯ ಬಳಸುವ ಪೆÇೀಷಕಾಂಶಗಳ (N:P:K) ಓ:P:ಏ ಅನುಪಾತ 8:6:1 ಆಗಿದೆ. ಆದರೆ ವಿಜ್ಞಾನಿಗಳ ಪ್ರಕಾರ ನಿರಂತರವಾಗಿ ಯುರಿಯಾ ಹಾಗೂ ಡಿ.ಎ.ಪಿ ಬಳಸುವುದರಿಂದ ಸದರಿ ಅನುಪಾತ ಮತ್ತಷ್ಟು ಹೆಚ್ಚಾಗಿ ಭೂಮಿಯ ಆರೋಗ್ಯ ಹಾಳಾಗುವ ಸಾಧ್ಯತೆ ಇದ್ದು, ಸಾವಯವ ಗೊಬ್ಬರಗಳ ಜೊತೆಗೆ ಸಂಕಿರ್ಣ ರಾಸಾಯನಿಕ ಗೊಬ್ಬರಗಳಾದ 10:26:26, 20:20:0:13, 17:17:17 ಮುಂತಾದ ರಸಗೊಬ್ಬರ ಬಳಸುವುದರಿಂದ ಭೂಮಿಯ (ಎನ್:ಪಿ:ಕೆ) (N:P:K) ಅನುಪಾತ ಸಮತೋಲನವಾಗಿ ಮಣ್ಣಿನ ಆರೋಗ್ಯ ಸುಧಾರಿಸಲಿದೆ.
ಪ್ರಸ್ತುತ ಸಾಲಿನಲ್ಲಿ ಮುಂಗಾರು ಹಂಗಾಮು 15 ದಿನಗಳ ಮುಂಚಿತವಾಗಿ ಪ್ರಾರಂಭವಾಗಿರುದರಿಂದ ರೈತರು ಬೀಜ ಹಾಗೂ ಗೊಬ್ಬರದ ಅಭಾವ ಅಗಬಹುದೆಂದು ಭಾವಿಸಿ ಆತಂಕದಲ್ಲಿದ್ದಾರೆ. ಅದರೆ ಪ್ರತಿ ವರ್ಷದಂತೆ ಈ ವರ್ಷವು ಕೂಡ ಜಿಲ್ಲೆಗೆ ಬೀಜ ಹಾಗೂ ರಸಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ಕೇಂದ್ರ ಕಚೇರಿಯಿಂದ ಹಂಚಿಕೆಯಾಗಿದ್ದು, ರೈತರು ಆತಂಕಪಡುವ ಅವಶ್ಯಕತೆ ಇರುವುದಿಲ್ಲ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ರೈತ ಬಾಂಧವರಲ್ಲಿ ವಿನಂತಿಸಿಕೊಂಡಿದ್ದಾರೆ.