ಕಲಬುರಗಿ: ಜಿಲ್ಲೆಯಲ್ಲಿ ಈಗಾಗಲೆ ಸಾರಿಗೆ ಕಚೇರಿಯಿಂದ ನೋಂದಣಿಯಾಗಿರುವ ಮತ್ತು ಮುಂದೆ ನೊಂದಣಿಯಾಗುವ ಎಲ್ಲಾ ಎಲೆಕ್ಟಿçಕ್ ಆಟೋಗಳು ಆರ್.ಟಿ.ಓ ಕಚೇರಿಯಿಂದ ಕಲಬುರಗಿ ನಗರದಲ್ಲಿ ಸಂಚಾರಕ್ಕೆ ಪರ್ಮಿಟ್ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದರು.
ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಮತ್ತು ಜಿಲ್ಲಾ ಜೀವ ರಕ್ಷಕ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದೂವರೆಗೆ ಬಯೋ ಇಂಧನದ ವಾಹನಗಳಿಗೆ ಪ್ರೋತ್ಸಾಹಿಸಲು ಪರ್ಮಿಟ್ ದಿಂದ ವಿನಾಯಿತಿ ನೀಡಲಾಗಿತ್ತು. ಇದೀಗ ಸರ್ಕಾರದ ನಿರ್ದೇಶನಾಸಾರ ಎಲೆಕ್ಟಿçಕ್ ಆಟೋ ಮಾಲೀಕರು ಪರ್ಮಿಟ್ ಪಡೆಯಬೇಕಾಗಿದೆ ಎಂದರು.
ಇನ್ನು ರಸ್ತೆ ಅಪಘಾತ ಪ್ರಕರಣದಲ್ಲಿ ಗಾಯಾಳುಗಳಿಗೆ ಮತ್ತು ಸಾವು-ಮರಣ ಹೋರಾಟದಲ್ಲಿದ್ದವರಿಗೆ ಗೋಲ್ಡನ್ ಹವರ್ ನಲ್ಲಿ ನೆರವು ನೀಡಿದವರಿಗೆ ಪ್ರೋತ್ಸಾದಾಯಕ 5,000 ರೂ. ಮೊತ್ತ ಕೂಡಲೆ ಬಿಡುಗಡೆ ಮಾಡಬೇಕು ಎಂದ ಜಿಲ್ಲಾಧಿಕಾರಿಗಳು, ಎಸ್.ಪಿ. ಕಚೇರಿಯಿಂದ 8 ಪ್ರಸ್ತಾವನೆಗಳು ಬಂದಿದ್ದು, ಕೂಡಲೆ ಸಹಾಯ ಹಸ್ತ ಚಾಚಿದ ಸಾರ್ವಜನಿಕರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದರು.
ಜಿಲ್ಲೆಯಾದ್ಯಂತ ಹಿಟ್ & ರನ್ ಪ್ರಕರಣಗಳಲ್ಲಿ ವಿಮೆ ಮಾಡಿಸಿಕೊಳ್ಳದ ಪಾದಚಾರಿಗಳಿಗೆ ಮರಣ ಪ್ರಕರಣ ಮತ್ತು ರಸ್ತೆ ಅಫಘಾತದಲ್ಲಿ ಗಾಯಾಳು ಪ್ರಕರಣಗಳ ಪೈಕಿ ಬಾಕಿ ಪ್ರಕರಣಗಳಲ್ಲಿ ತ್ವರಿತವಾಗಿ ಪರಿಹಾರ ನೀಡಲು ವಿಚಾರಣಾಧಿಕಾರಿಗಳಾಗಿರುವ ಕಂದಾಯ ಉಪ ವಿಭಾಗದ ಸಹಾಯಕ ಆಯುಕ್ತರು ಕೂಡಲೆ ಜಿಲ್ಲಾ ಸಮಿತಿಗೆ ವರದಿ ಸಲ್ಲಿಸಬೇಕೆಂದು ಹಿಟ್ & ರನ್ ಅಪಘಾತದಲ್ಲಿ ಮರಣ ಹೊಂದಿದವರಿಗೆ ಮತ್ತು ಗಾಯಾಳುಗಳಿಗೆ ಪರಿಹಾರ ಧನ ಮಂಜೂರಾತಿ ನೀಡುವ ಜಿಲ್ಲಾ ಸಮಿತಿ ಸಭೆಯಲ್ಲಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಸೂಚಿಸಿದರು.
ಹಿಟ್ & ರನ್ ಪ್ರಕರಣಗಳಲ್ಲಿ ಮರಣ ಹೊಂದಿದ್ದವರಿಗೆ 32 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂ. ನೆರವು ನೀಡಲಾಗುತ್ತಿದ್ದು, ಪೊಲೀಸ್ ಇಲಾಖೆಯು ವೈದ್ಯಕೀಯ ವರದಿಯೊಂದಿಗೆ ಎ.ಸಿ.ಗಳಿಗೆ ಸಲ್ಲಿಸಬೇಕು. ಎ.ಸಿ. ಅವರು ಪರಾಮರ್ಶಿಸಿ ಪರಿಹಾರಕ್ಕೆ ಶಿಫಾರಸ್ಸು ಮಾಡಬೇಕೆಂದ ಅವರು, ಅರ್ಹರೆಲ್ಲರಿಗೂ ತಕ್ಷಣವೇ ಪರಿಹಾರ ಬಿಡುಗಡೆಗೆ ಕ್ರಮ ವಹಿಸುವಂತೆ ಎ.ಸಿ.ಗಳಿಗೆ ಸೂಚಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಭೆ ಸಹ ನಡೆಸಿದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಜಿಲ್ಲೆಯಾದ್ಯಂತ ಈಗಾಗಲೆ ಗುರುತಿಸಿರುವ ಬ್ಲ್ಯಾಕ್ ಸ್ಪಾಟ್ಗಳಲ್ಲಿ, ರಸ್ತೆ ತಿರುವುಗಳಲ್ಲಿ ಸೈನೇಜ್ ಬೋರ್ಡ್ ಅಳವಡಿಕೆ, ರಸ್ತೆ ಗುಂಡಿ ಮುಚ್ಚುವುದು ಬೀದಿ ದೀಪ ಅಳವಡಿಕೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಪೊಲೀಸ್, ಸಂಚಾರಿ ಪೊಲೀಸ್, ಆರ್.ಟಿ.ಓ, ಡಿ.ಡಿ.ಪಿ.ಐ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸುಗಮ ಮತ್ತು ಸುರಕ್ಷತೆಯ ಸಂಚಾರ ನಿಟ್ಟಿನಲ್ಲಿ ಸಾರ್ವಜನಿಕರಿಗೆ ರಸ್ತೆ ನಿಯಮಗಳು ಕುರಿತು ವ್ಯಾಪಕ ಪ್ರಚಾರ ಮತ್ತು ಅರಿವು ಕಾರ್ಯಕ್ರಮ ಆಯೋಜಿಸಬೇಕು ಎಂದರು.
ಸಭೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಹೆಚ್ಚುವರಿ ಎಸ್.ಪಿ. ಮಹೇಶ ಮೇಘಣ್ಣನವರ್, ಡಿ.ಸಿ.ಪಿ ಪ್ರವೀಣ ನಾಯಕ್, ಆರ್.ಟಿ.ಓ ಆನಂಧ ಪಾರ್ತನಳ್ಳಿ, ಲೊಕೋಪಯೋಗಿ ಇಲಾಖೆಯ ಇ.ಇ. ಸುಭಾಷ ಬಿರಾದಾರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮುನಾವರ ದೌಲಾ ಸೇರಿದಂತೆ ಸಮಿತಿಗಳ ಸದಸ್ಯರು ಭಾಗವಹಿಸಿದ್ದರು.