ಕಲಬುರಗಿ: ತರಾತುರಿಯಲ್ಲಿ ಆರ್.ಸಿ.ಬಿ ವಿಜಯೋತ್ಸವ ಆಯೋಜಿಸಿ 11 ಜನರ ಸಾವಿಗೆ ಕಾರಣವಾಗಿದೆ. ಅಲ್ಲದೇ, ತಮ್ಮ ತಪ್ಪು ಮುಚ್ಚಿಕೊಳ್ಳಲು ಪೊಲೀಸ್ ಅಧಿಕಾರಿಗಳ ಅಮಾನತು ಮಾಡಿದ ಕಾಂಗ್ರೆಸ್ ಸರಕಾರದ ನಡೆ ಖಂಡಿಸಿ ಶುಕ್ರವಾರ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತದ ಬಳಿ ನೂರಾರು ಬಿಜೆಪಿ ಕಾರ್ಯಕರ್ತರು, ಮುಖಂಡರು ಭಾಗಿಯಾಗಿ ಸರಕಾರ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ವಿರುದ್ದ ಆಕ್ರೋಶ ಕೂಗಿದರು. ಸರಕಾರ ಸೂಕ್ತ ವ್ಯವಸ್ಥೆ ಮಾಡದೇ, ಅಮಾಯಕರ ಸಾವಿಗೆ ನೇರ ಕಾರಣವಾಗಿದೆ. ಸರಕಾರ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ಕಾಂಗ್ರೆಸ್ ಸರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಕಪ್ ಗೆದ್ದ ಸಂಭ್ರಮ ತಾರಾತುರಿಯಲ್ಲಿ ಮಾಡಿದೆ. ಪೊಲೀಸ್ ಅಧಿಕಾರಿಗಳು ವಿಜಯೋತ್ಸವಕ್ಕೆ ಅವಕಾಶ ಇಲ್ಲ ಎಂದು ಹೇಳಿದರು. ಯಾರದ್ದೋ ಮಾತು ಕೇಳಿ ತಂಡವನ್ನು ಕರೆಸಿ ವಿಜಯೋತ್ಸವ ಮಾಡುವ ಮೂಲಕ ಅಭಿಮಾನಿಗಳ ಜೀವಕ್ಕೆ ನೇರ ಹೊಣೆಯಾಗಿದ್ದಾರೆ ಇದು ಖಂಡನೀಯ ಎಂದು ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಬಿಜೆಪಿ ಒಬಿಸಿ ಮೋರ್ಚಾ ಮುಖಂಡ ಅವ್ವಣ್ಣ ಮ್ಯಾಕೇರಿ, ಮಹದೇವ್ ಬೆಳಮಗಿ, ಉಮೇಶ್ ಪಾಟೀಲ್, ಶಿವಯೋಗಿ ನಾಗನಹಳ್ಳಿ, ಶ್ರೀನಿವಾಸ್ ದೇಸಾಯಿ, ಅಪ್ಪು ಕಣಕಿ, ಗಿರಿರಾಜ್ ಯಳಮೇಲಿ ಸೇರಿದಂತೆ ಅನೇಕರು ಇದ್ದರು.