ಕಲಬುರಗಿ: ನಗರದಲ್ಲಿ ತಲೆ ಎತ್ತಿರುವ ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳದೇ ಕಾಲ ಹರಣ ಮಾಡುತ್ತಿರುವ ಕಲಬುರಗಿಯ ಪಾಲಿಕೆ ಆಯುಕ್ತರು, ಮೇಯರ್ ಮತ್ತು ಶಾಸಕರ ನೀತಿ ಖಂಡಿಸಿ, ಪಾಲಿಕೆಯ ಕಚೇರಿಯ ಎದುರುಗಡೆ ಜನತಾ ಪರಿವಾರ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಕಲಿ ಕಟ್ಟಡ ಪರವಾನಗಿಗಳ ಮೇಲೆ ಯಾವುದೇ ಕ್ರಮವಿಲ್ಲ, ಪಾಲಿಕೆಯಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ, ಇ ಖಾತಾ (ಎ ಮತ್ತು ಬಿ) ಖಾತಾ ನಡುವಿನ ವ್ಯತ್ಯಾಸದ ಸಮಸ್ಯೆ ಬಗೆ ಹರಿಸದಿರುವುದು, ಹೆಚ್ಚುತ್ತಿರುವ ಬೀದಿ ನಾಯಿಗಳ ದಾಳಿಯ ಕುರಿತು ಕ್ರಮ, ಸರ್ವೀಸ್ ರಸ್ತೆಗಳ ಸಮಸ್ಯೆಗಳು, ಕಾರ್ಪೊರೇಷನ್ ಸಂಕೀರ್ಣದ ಸಮಸ್ಯೆಗಳು, ಅನೈರ್ಮಲ್ಯ ಕುಡಿಯುವ ನೀರಿನ ಸಮಸ್ಯೆ, ಸೇರಿದಂತೆ ಕಸ ವಿಲೇವಾರಿ, ವಿದ್ಯುತ್ ಕಂಬಗಳು, ಒಳಚರಂಡಿ ಮತ್ತು 24/7 ನೀರು ಸರಬರಾಜು ಮಾಡಬೇಕೆಂದು ಸಂಘಟನೆಯ ಪದಾಧಿಕಾರಿಗಳು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜನತಾ ಪರಿವಾರ ಸಂಘಟನೆ ಅಧ್ಯಕ್ಷ ಸಿರಾಜ್ ಶಾಬ್ಧಿ, ಪಾಲಿಕೆಯ ಕೆಲವು ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಹಣ ಪಡೆದುಕೊಂಡು ಅಕ್ರಮ ಕಟ್ಟಡಗಳಿಗೆ ಪರವಾನಗಿ ಕೊಡುತ್ತಿದ್ದಾರೆ. ಇಂತಹ ಕೆಲಸಗಳಿಂದಾಗಿ ನಗರ ವಾಸಿಗಳ ನಡುವೆ ಮಾರಣಾಂತಿಕ ಹಲ್ಲೆ ಪ್ರಕರಣಗಳು ನಡೆಯುತ್ತಿವೆ. ಕೂಡಲೇ ಇವುಗಳ ಬಗ್ಗೆ ಎಚ್ಚೆತ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಖಾಲೀದ್ ಅಬ್ರಾರ್, ಶೇಖ್ ಸೈಫನ್, ಆಕಾಶ್ ರಿಡ್ಲಾನ್, ಅಝರ್ ಮುಬಾರಕ್, ಅಝಮತ್ ಉಲ್ ಖಾದ್ರಿ, ಮುಬೀನ್ ಪೆಹಾಲ್ವನ್, ಅಬ್ದುಲ್ ಖದಿರ್, ಬಷೀದ್ ಶೇಖ್, ಶೇಖ್ ಜಾವೀದ್, ಶರಣು, ಸೇರಿದಂತೆ ಹಲವರು ಇದ್ದರು.